ಬಸವೇಶ್ವರ ವಚನ
ಇವ ನಮ್ಮವ, ಇವ ನಮ್ಮವ, ಇವ ನಮ್ಮವನು ಎಂದೆನಿಸಯ್ಯಾ.
ಕೂಡಲಸಂಗಮದೇವಾ
ನಿಮ್ಮ ಮನೆಯ ಮಗನು ಎಂದೆನಿಸಯ್ಯಾ.
ಬಸವಣ್ಣನವರ ಪ್ರತಿಯೊಂದು ವಚನದಲ್ಲೂ ಏನಾದರೊಂದು ಸಂದೇಶವಿರುತ್ತದೆ. ಇಲ್ಲಿ ನಾವು ಹೇಗಿರಬೇಕು , ಇತರರೊಂದಿಗೆ ಹೇಗಿರಬೇಕು ಎಂದು ಹಿತವಚನವನ್ನು ನೀಡಿದ್ದಾರೆ .
ಯಾರನ್ನಾದರೂ ನೋಡಿದರೆ ಇವನ್ಯಾರು ಎಂದು ದೂರವಿಡಬೇಡಿ, ಅವನು ನಮ್ಮವನು ಎಂಬ ಭಾವನೆ ಇದ್ದರೆ ಆಗ ಸುಖ ನಮ್ಮದಾಗುತ್ತದೆ. ಕೇವಲ ನಮ್ಮವನು ಎಂದಾದರೆ ಸಾಲದು ನಮ್ಮ ಮನೆಯವನೇ, ನಮ್ಮ ಮಗನಂತೆಯೇ ಎಂಬ ಭಾವನೆ ಬಂದರೆ ಸೌಹಾರ್ದತೆ ತಾನೇ ತಾನಾಗಿ ಮೂಡುತ್ತದೆ. ಅಂದರೆ ಇಲ್ಲಿನ ಮುಖ್ಯ ಸಂದೇಶ, ನಾವೆಲ್ಲರೂ ಒಂದೇ, ಬೇಧಭಾವ ಮಾಡಬೇಡಿ ಎಂದು.
ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ನಾವು ಚಿಕ್ಕಂದಿನಿಂದಲೂ ಇಂತಹ ಒಳ್ಳೆಯ ಉಪದೇಶಗಳನ್ನು ಕೇಳಿ ಕೇಳಿಯೇ ಬೆಳೆಯುತ್ತೇವೆ. ಶಾಂತಿ, ಸಹನೆ, ಮರುಕ, ನಾವೆಲ್ಲರೂ ಒಂದೇ ಎಂಬ ಭಾವ, ನಮ್ಮಂತೆಯೇ ಇತರರು ಇಂತಹ ಭಾವನೆಗಳು ನಮ್ಮಲ್ಲಿ ಹಾಸುಹೊಕ್ಕಾಗಿರುತ್ತದೆ.
ಎಲ್ಲರೂ ಹೀಗೇ ಭಾವಿಸಿ ನಡೆದರೆ ಎಲ್ಲವೂ ಚೆನ್ನಾಗಿಯೇ ಇರುತ್ತದೆ. ಆದರೆ ಒಬ್ಬರು ಮಾತ್ರ ಹೀಗಿದ್ದು ಇನ್ನೊಬ್ಬರು ಅದಕ್ಕೆ ತದ್ವಿರುದ್ಧವಾಗಿ ನಡೆದರೆ ಏನಾಗಬಹುದು? ಅದೇ ಇಂದು ನಡೆಯುತ್ತಿರುವುದು. ಒಳ್ಳೆಯತನವನ್ನು ದುರುಪಯೋಗ ಮಾಡಿಕೊಳ್ಳುವವರೇ ಮೇಲುಗೈ ಸಾಧಿಸುತ್ತಿದ್ದಾರೆ.
ಹೀಗಾಗಿ ಇಂದಿನ ಕಾಲಕ್ಕೆ, ಶಾಂತಿ ಸಹನೆ ಮೊದಲಾದ ಒಳ್ಳೆಯತನವಷ್ಟೇ ಸಾಲದು, ಸಮಯ ಬಂದರೆ ಕೆಚ್ಚೆದೆಯಿಂದ ಸವಾಲನ್ನು ಎದುರಿಸಬೇಕು ಎಂಬ ಉಪದೇಶವನ್ನೂ ಕಲಿಸಬೇಕು. ನಾವು ಇತರರನ್ನು ನಮ್ಮವರಂತೆ ಕಾಣಬೇಕು ನಿಜ, ಆದರೆ ಅದೇ ಒಳ್ಳೆಯತನ ಅವರಲ್ಲಿಯೂ ಇರಬೇಕಲ್ಲವೇ? ನಮ್ಮ ಒಳ್ಳೆಯತನವನ್ನು ದುರುಪಯೋಗಪಡಿಸಿಕೊಂಡು ನಮ್ಮ ವಿರುದ್ಧ ತಿರುಗಿಬೀಳುವ ಅನೇಕರು ನಮ್ಮ ನಡುವೆಯೇ ಇದ್ದಾರೆ. ನಾವು ಎಚ್ಚರಿಕೆಯಿಂದ ಇದ್ದು ಒಳ್ಳೆಯವರಾಗಿ ಇರೋಣ, ದುರುಪಯೋಗ ಪಡಿಸಿಕೊಂಡು ಕೆಡುಕನ್ನುಂಟು ಮಾಡುವವರಿಗೆ ಸರಿಯಾಗಿ ಪಾಠ ಕಲಿಸುವ ಬುದ್ಧಿಯನ್ನೂ ಕಲಿಯೋಣ.
ಇವನಾರವ, ಇವನಾರವ ನೆಂದೆನಿಸದಿರಯ್ಯಾ, ಎಂಬ ಬಸವಣ್ಣನವರ ಈ ವಚನಕ್ಕೆ ಅಭೋಗಿ ರಾಗದಲ್ಲಿ ಸಂಯೋಜಿಸಿ ಕೀಬೋರ್ಡ್ನಲ್ಲಿ ನುಡಿಸಿದ್ದೇನೆ. ಕೇಳಿ ಆನಂದಿಸಿ, ಪ್ರೋತ್ಸಾಹಿಸಿ. ಯೂಟ್ಯೂಬ್ ನ ಹಾಡಿನ ಕೊಂಡಿ ಇಲ್ಲಿದೆ. ವಾದ್ಯ ಸಂಗೀತದೊಂದಿಗೆ ಹಾಡು ಶೀರ್ಷಿಕೆ ತೆರೆಯ ಮೇಲೆ ಬರುತ್ತದೆ. ಸಂಗೀತ ಸಾಹಿತ್ಯ ಎರಡನ್ನು ಆನಂದಿಸಬಹುದು.
No comments:
Post a Comment